ಲೋಭಮಂ ತ್ಯಜಿಸಿ ರೋಷವ ವರ್ಜಿಸಿ ।
ಸರ್ವಸಖ್ಯವ ಭಜಿಸಿ ತೃಪ್ತತೆಯನಭ್ಯಸಿಸಿ
ಸತ್ಯಪಾಲನೆಯೊಂದ ಮನದೊಳಿರಿಸಿ ।
ಕಾಯಕಷ್ಟವ ಸಹಿಸಿ ವೈರಿಗಣಮಂ ಕ್ಷಮಿಸಿ
ಸರ್ವಸಮತೆಯ ಗಳಿಸಿ ಶಮವನರಸಿ ।
ಸ್ವಾತ್ಮಶಿಕ್ಷಣಮೇ ಸ್ವರಾಜ್ಯಮೆನ್ನುತ ವಚಿಸಿ
ದೇಶಸೇವೆಯನೀಶಸೇವೆಯೆನಿಸಿ ॥
ಸಾಧುವೃತ್ತಿಯ ಪಥವ ತನ್ನ ಬಾಳಿನೊಳೆ ತೋರಿ ।
ಪಾಶವೀ ಬಲದ ದೌರ್ಬಲ್ಯಮಂ ವಿಶದಬಡಿಸಿ ।
ಪಾಶ್ಚಾತ್ಯ ಜನಕಮಧ್ಯಾತ್ಮನೀತಿಯನು ಪೇಳ್ದಾ ।
ದೈವಸಂಪನ್ಮಾರ್ಗದರ್ಶಕಂ ಗಾಂಧಿಯಲ್ತೆ ॥