ಪಾರಂತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮುದ್ಯ
ಬಜತ್ತೂರು ಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು, ದ.ಕ. ಜಿಲ್ಲೆ, ಕರ್ನಾಟಕ 574241
ಬ್ರಹ್ಮಕಲಶೋತ್ಸವದ ಮನವಿ.
ಪಾರಂತೀಸುರಸದನಂ ವಿಶಾಲಸಂವಿತ್ ಸಂಪ್ರಾಪ್ತಃ ಖಲು ಸುಚಿರಾನ್ನಿವೇದ್ಯಹೀನಮ್ |
ಗ್ರಾಮ್ಯಾಗ್ರ್ಯಕ್ಷಿತಿಪತಿಭಿರ್ದಿನಾರ್ಧಮಾತ್ರಾತ್ ತದ್ಭೂತೀರ್ವ್ಯಧಿತ ಸಭೂತಬಲ್ಯನಲ್ಪಾಃ ||
ಭೀಮತ್ವೇ ಸಹ ಸಹಜೈಃ ಪ್ರತಿಷ್ಠಿತಃ ಪ್ರಾಕ್ ಪಂಚಾತ್ಮಾ ಮುರರಿಪುರಂಚಿತೋ ಯದತ್ರ |
ಪಾಂಚಾಲ್ಯಾ ಬಲಿಸಲಿಲಂ ಸಮಂ ದದತ್ಯಾ ಸೋಸ್ಮಾರ್ಷೀತ್ ತಮಿಮಮಥ ಪ್ರಪೂಜ್ಯಪೂಜ್ಯಃ ||
(ಶ್ರೀ ಮಧ್ವ ವಿಜಯದ ೧೬ ನೇ ಸರ್ಗದ ೩೬ ಮತ್ತು ೩೭ನೇ ಶ್ಲೋಕಗಳು)
ಸುಮಾರು ಐದು ಸಾವಿರಕ್ಕಿಂತಲೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಶ್ರೀ ದೇವಾಲಯವು ಪಾಂಡವರ ಕಾಲದಲ್ಲಿ ದ್ರೌಪದೀ ಸಮೇತನಾದ ಭೀಮಸೇನ ದೇವರಿಂದ ಪ್ರತಿಷ್ಠಾಪನೆಗೊಂಡಿದೆ ಎನ್ನುವುದು ಇಲ್ಲಿನ ಐತಿಹ್ಯ. ೮೦೦ ವರ್ಷಗಳ ಹಿಂದೆ ದ್ವೈತಮತ ಪ್ರವರ್ತಕರಾದ ಶ್ರೀ ಮಧ್ವಾಚಾರ್ಯರು ತಮ್ಮ ಹಿಂದಿನ ಭೀಮಾವತಾರದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಪಂಚರೂಪೀ ಪರಮಾತ್ಮನನ್ನು ಸ್ಮರಿಸಿಕೊಂಡು ಪಾರಂತಿಗೆ ಆಗಮಿಸಿ ಊರಿನ ಮುಖಂಡರನ್ನು ಸೇರಿಸಿ ಜೀರ್ಣವಾಗಿದ್ದ ದೇವಾಲಯದ ಸರ್ವವ್ಯವಸ್ಥೆಯನ್ನೂ ಅರ್ಧದಿನದೊಳಗೆ ಮಾಡಿ ಪಾವನವನ್ನಾಗಿಸಿದರು ಎನ್ನುವುದು ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಮಧ್ವವಿಜಯ ಗ್ರಂಥದ ಉಲ್ಲೇಖ. ಶ್ರೀ ಮಧ್ವಾಚಾರ್ಯರು ವಶಿತ್ವ ಎನ್ನುವ ಅಪೂರ್ವವಾದ ಯೋಗಶಕ್ತಿಯನ್ನು ಇಲ್ಲಿ ಪ್ರಕಟಿಸಿರುತ್ತಾರೆ ಈ ದೇವಾಲಯದ ಪ್ರಾಂಗಣದಲ್ಲೇ ಶ್ರೀ ಮಧ್ವಾಚಾರ್ಯರ ಸಂಪರ್ಕಕ್ಕೊಳಗಾಗಿದೆ ಎನ್ನಲಾದ ಹಳೆಯ ಧಾತ್ರಿ ವೃಕ್ಷವಿದೆ.
೧೯೯೬ ರಲ್ಲಿ ಪಲಿಮಾರು ಮಠಾಧೀಶರಾದ ಶ್ರೀಶ್ರೀ ವಿದ್ಯಾಮಾನ್ಯತೀರ್ಥಶ್ರೀಪಾದರು ಸಂಯೊಜಿಸಿದ ಯಾತ್ರೆಯಲ್ಲಿ ಬೆಳಗಿದ ಕ್ಷೇತ್ರ ಪಾರಂತಿ. ಕೊರತೆಗಳಿರುವ ಈ ಕ್ಷೇತ್ರದ ಅಭಿವೃದ್ಧಿಗಾಗಿ ಪಾರಂತಿ ಟೆಂಪಲ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ೧೯೯೭ರ ಕಾರ್ತಿಕ ಪೂರ್ಣಿಮೆಯ ದಿನದಂದು ಧಾತ್ರಿಹವನ ಹಾಗೂ ವನಭೋಜನಗಳನ್ನು ಆರಂಭಿಸಿ ಮುಂದೆ ಪ್ರತಿವರ್ಷವೂ ನಡೆಯುವಂತೆ ವ್ಯವಸ್ಥೆ ಮಾಡಿದರು. ೨೦೧೩ ರಲ್ಲಿ ಶ್ರೀಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀಪೇಜಾವರ ಮಠ ಹಾಗೂ ಶ್ರೀಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀ ಪಲಿಮಾರು ಮಠ ಇವರುಗಳ ನೇತೃತ್ವದಲ್ಲಿ ದೇವಾಲಯದ ಪುನರ್ನವೀಕರಣ ಕಾರ್ಯವು ಆರಂಭವಾಯಿತು. ಸುಮಾರು ಒಂದು ಕೋಟಿ ರೂಪಾಯಿಗಳ ಈ ಯೋಜನೆಗೆ ಪ್ರಪ್ರಥಮವಾಗಿ ಉತ್ತರಾದಿ ಮಠಾಧೀಶರಾದ ಶ್ರೀಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥಶ್ರೀಪಾದರು ಮೂರು ಲಕ್ಷ ರೂಪಾಯಿಗಳನ್ನು ಅನುಗ್ರಹಿಸಿದರು.
ಶ್ರೀ ಪೇಜಾವರ ಮಠಾಧೀಶರು, ಶ್ರೀ ಅದಮಾರು ಮಠಾಧೀಶರು, ಶ್ರೀ ಭಂಡಾರಿಕೇರಿ ಮಠಾಧೀಶರು, ಶ್ರೀ ಸುಬ್ರಹ್ಮಣ್ಯ ಮಠಾಧೀಶರು ಒಂದೊಂದು ಲಕ್ಷ ರುಪಾಯಿಗಳಂತೆ ಅನುಗ್ರಹಿಸಿರುತ್ತಾರೆ. ಶ್ರೀ ಪುತ್ತಿಗೆ ಮಠಾಧೀಶರು, ಶ್ರೀ ಕೃಷ್ಣಾಪುರ ಮಠಾಧೀಶರು ವಿಶೇಷವಾಗಿ ಸಹಕಾರವನ್ನು ನೀಡಿರುತ್ತಾರೆ. ಶ್ರೀ ಪರ್ಯಾಯ ಕಾಣಿಯೂರು ಮಠಾಧೀಶರು ಸಹಕಾರವನ್ನು ನೀಡುವ ಭರವಸೆಯನ್ನು ನೀಡಿರುತ್ತಾರೆ.
ಊರ ಪರವೂರ ಭಕ್ತರು ವಿಶೇಷವಾಗಿ ಸಹಕಾರವನ್ನು ನೀಡುವ ಮೂಲಕ ಜೀರ್ಣೋದ್ಧಾರ ಕಾರ್ಯವು ಯಶಸ್ವಿಯಾಗಿ ನಡೆಯುತ್ತಿದೆ. ಬ್ರಹ್ಮಕಲಶವು ಇದೇ ದಶಂಬರ್ ೨೯ ನೇ ತಾರೀಕಿನಿಂದ ಆರಂಭವಾಗಲಿದ್ದು ಜನವರಿ ೩ ರ ತನಕ ನಡೆಯಲಿದೆ. ದಶಂಬರ ೩೦ ರಂದು ದೇವರ ಪ್ರತಿಷ್ಠೆಯು ನಡೆಯಲಿದೆ. ೨/೦೧/೨೦೧೬ ರಂದು ಶ್ರೀ ಮಂತ್ರಾಲಯದ ಶ್ರೀ ಶ್ರೀ ೧೦೦೮ ಶ್ರೀ ಸುಬುದೇಂದ್ರತೀರ್ಥಶ್ರೀಪಾದರು ಶ್ರೀ ಮಧ್ವಾಚಾರ್ಯರ ಪ್ರತಿಷ್ಠೆಯನ್ನು ಮಾಡಲಿದ್ದಾರೆ. ಹಾಗೂ ಆ ಸಂದರ್ಭದಲ್ಲಿ ವಿಶೇಷವಾದ ನಿಧಿಯನ್ನೂ ದೇವರಿಗೆ ಸಮರ್ಪಿಸಲಿದ್ದಾರೆ. ೦೩/೦೧/೨೦೧೬ ರಂದು ಶ್ರೀ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥರು ಬ್ರಹ್ಮಕಲಶದಲ್ಲಿ ಉಪಸ್ಥಿತರಿದ್ದು ಬಳಿಕ ರಾಜಗೋಪುರವನ್ನು ದೇವರಿಗೆ ಸಮರ್ಪಿಸಲಿದ್ದಾರೆ.
ಈ ಕಾರ್ಯಕ್ರಮದ ಸಿದ್ಧತೆಗಾಗಿ ಈಗಾಗಲೇ ಊರ ಭಕ್ತಾದಿಗಳು ಶ್ರಮದಾನದ ಮೂಲಕ ದೇವರ ಸೇವೆಯನ್ನು ಮಾಡುತ್ತಿದ್ದಾರೆ. ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ಬ್ರಹ್ಮಕಲಶದ ಸಂಭ್ರಮಕ್ಕಾಗಿ ಊರು ಸಿಂಗಾರಗೊಳ್ಳುತ್ತಿದೆ. ನಮ್ಮ ಊರಿಗೆ ತಾವೂ ಬನ್ನಿ. ತಮ್ಮವರನ್ನೂ ಕರೆತನ್ನಿ. ತನುಮನಧನಗಳಿಂದ ಸಹಕರಿಸಿ, ದೇವರ ಕೃಪೆಗೆ ಪಾತ್ರರಾಗಿ ಎಂದು ತಮ್ಮಲ್ಲಿ ವಿನಂತಿಸುತ್ತೇವೆ.
ತಾವು ನೀಡುವ ಧನಸಹಾಯವನ್ನು ಪಾರಂತಿ ಪಂಚಲಿಂಗೇಶ್ವರ ಮಾಧ್ವ ಸೇವಾ ಸಮಿತಿ, ಕರ್ಣಾಟಕ ಬ್ಯಾಂಕ್, ಉಪ್ಪಿನಂಗಡಿ ಶಾಖೆ,ಇದರ ಉಳಿತಾಯ ಖಾತ ಸಂಖ್ಯೆ 8082500100706101 (IFSC Code: KARB0000808) ಇದಕ್ಕೆ ನೆರವಾಗಿ ಸಂದಾಯ ಮಾದಬಹುದು. ಪಾರಂತಿ ಪಂಚಲಿಂಗೇಶ್ವರ ಮಾಧ್ವ ಸೇವಾ ಸಮಿತಿ ಈ ಹೆಸರಿಗೆ ಚೆಕ್/ಡ್ರಾಫ಼್ಟ್ ರೂಪದಲ್ಲೂ ಹಣವನ್ನು ಸಂದಾಯ ಮಾಡಬಹುದು.
ಶ್ರೀ ಅನಂತಕೃಷ್ಣ ಉಡುಪ, ಮುದ್ಯ
ಅನುವಂಶಿಕ ಮೊಕ್ತೆಸರರು, ಅರ್ಚಕರು
ಪಾರಂತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮುದ್ಯ
ಶ್ರೀ ಗೋಪಾಲಕೃಷ್ಣ ಪಡ್ಡಿಲ್ಲಾಯ.
ಅಧ್ಯಕ್ಷರು,
ಪಾರಂತಿ ಪಂಚಲಿಂಗೇಶ್ವರ ಮಾಧ್ವ ಸೇವಾ ಸಮಿತಿ.
ಹೆಚ್ಚಿನ ಸಂಪರ್ಕಕ್ಕಾಗಿ : ಶ್ರೀ ಸೂರ್ಯಪ್ರಕಾಶ ಉಡುಪ, ಮುದ್ಯ -
9449529215
For Temple photos and route map visit:
Regards,