ಮಾನ್ಯ ಸಂಪಾದಕರೆ,
ಪ್ರಶಾಂತ ಬೀಚಿಯವರು ಬರೆದ ’ಕನ್ನಡಕ್ಕಾಗಿ ಕೈಎತ್ತು...’ ಎಂಬ ಲೇಖನ ಇತ್ತೀಚೆಗೆ
ಅಮೆರಿಕಾದಲ್ಲಿ ಅದ್ದೂರಿಯಾಗಿ ನಡೆದ ವಿಶ್ವಕನ್ನಡಿಗರ ಸಮ್ಮೇಳನದಲ್ಲಿ ಕಾಣಬಂದ ಒಂದು
ಮುಖ್ಯವಾದ ಅಂಶವನ್ನು ಎತ್ತಿ ತೋರಿಸುತ್ತದೆ. ಅದೇನೆಂದರೆ ಹೊರದೇಶದಲ್ಲಿದ್ದು
ಕಷ್ಟಗಳನ್ನು ಅನುಭವಿಸಿ ಸಂಸಾರಗಳನ್ನು ಹೂಡಿ, ಅಪಾರ ತೊಡಕುಗಳನ್ನು ಎದುರಿಸಿ
ಮುಂದುಬಂದಿರುವ ಕನ್ನಡಿಗರು ’ತಮ್ಮ ತಾಯಿನಾಡಿನಲ್ಲಿ ಕನ್ನಡವನ್ನು ಕಾಪಾಡಿ ಅದನ್ನು
ಉದ್ಧರಿಸುವ ಯಾವುದಾದರು ಕಾರ್ಯಕ್ರಮವನ್ನು ತಂದಿದ್ದಾರೆಯೆ?’ ಎಂಬ ಅಂಶ.
ಈಗಾಗಲೇ ಅಮೆರಿಕಾದ ವಿದೇಶೀಕನ್ನಡಿಗರು ಅಮೆರಿಕಾದಲ್ಲೇ ಜನಿಸಿದ ಮುಂದಿನ ಕನ್ನಡ
ಪೀಳಿಗೆಗಳಿಗೆ ಕನ್ನಡವನ್ನು ಕಲಿಸುವ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ.
ಆವುಗಳಲ್ಲಿ ’ಕನ್ನಡ ಕಲಿ’ ಎಂಬ ಭಾನುವಾರದ ತರಗತಿಗಳನ್ನು ಅಮೆರಿಕದ ಅನೇಕ
ಕನ್ನಡಕೂಟಗಳು ಯಶಸ್ವಿಯಾಗಿ ನಡೆಸುತ್ತಿದ್ದಾರೆಂಬುದು ಪ್ರಶಂಸನೀಯ.
ಬ್ರಿಟನ್ನಿನ ೧೯೮೮ರಲ್ಲಿ ಮ್ಯಾಂಚೆಸ್ಟರಿನಲ್ಲಿ ನಡೆದ ಮೊದಲನೆಯ ವಿಶ್ವಕನ್ನಡಿಗರ
ಸಮ್ಮೇಳನದಲ್ಲಿ ಕೇಳಿಬಂದ ಒಂದು ಮುಖ್ಯವಾದ ಪ್ರಷ್ಣೆಏನೆಂದರೆ, ’ನಿಮ್ಮತಾಯಿನಾಡಿಗೆ
ನೀವೇನುಮಾಡುತ್ತಿದ್ದೀರಿ?’ ಆ ಸಮ್ಮೇಳನಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು ಕೇಳಿದ
ಪ್ರಷ್ಣೆ ಇದು. ಆ ಸಮಯ, ಕಂಪ್ಯೂಟರುಗಳ, ಸಾಫ಼್ಟ್ವೇರುಗಳ, ಐಟಿಗಳ ಪೂರ್ವಸಮಯ.
ತಾಯಿನಾಡಿನ ಉದ್ಧಾರಕ್ಕೆ ನೀವೇನು ಮಾಡುವಿರಿ? ಎಂಬ ಆ ಪ್ರಷ್ಣೆಗೆ ಉತ್ತರವಾಗಿ ಅನೇಕ
ವಿದೇಶೀ ಕನ್ನಡಿಗರು ಈಗಾಗಲೇ ಅನೇಕ ಕೈಗಾರಿಕಾ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ.
ಭಾರತದೆಲ್ಲಾ ಪ್ರಾಂತ್ಯಗಳಿಗಿಂತಲೂ ಕರ್ನಾಟಕವು ಮುಂದುವರೆದಿರುವುದು ವಿದೇಶೀಕನ್ನಡಿಗರ
ಭಾಗವಹಿಸುವಿಕೆಯು ಅತಿ ಮುಖ್ಯ. ಆದರೆ ಪ್ರಶಾಂತ ಬೀಚಿಯವರು ಕೇಳುವಹಾಗೆ
ವಿದೇಶೀಕನ್ನಡಿಗರು ಕನ್ನಡಕ್ಕಾಗಿ ಏನುಮಾಡಿದ್ದಾರೆ ಅಥವ ಅವರು ಎನೇನು ಮಾಡಬಹುದು? ಎಂಬ
ಪ್ರಷ್ಣೆ. ಅದಕ್ಕಾಗಿ ಕನ್ನಡನಾಡಿನಲ್ಲಿ ಕನ್ನಡಕ್ಕಾಗಿ ವಿದೇಶೀಕನ್ನಡಿಗರನ್ನು
ಕೇಳುವುದು, ನ್ಯೂಕಾಸಲ್ಲಿಗೆ ಕಲ್ಲಿದ್ದಲನ್ನು ಹೊತ್ತಹಾಗೆ(To carry coal to
Newcastle) ಆದರೆ ಈಗ ನ್ಯೂಕಾಸಲ್ಲಿನಲ್ಲೂ ಕಲ್ಲಿದ್ದಲು ಮುಗಿದಿದೆ!
ನಾನು ನೋಡಿರುವಹಾಗೆ, ವಿದೇಶೀಕನ್ನಡಿಗರ ಸಮಾರಂಭಗಳು ಮತ್ತು ಸಮ್ಮೇಳನಗಳು, ’ಕನ್ನಡಿಗರ
ಗೃಹವೇದನ ನಿವಾರಕ ಸಮಾರಂಭ’ಗಳಾಗಿ ತೋರುವುದು. ಕರ್ನಾಟಕದಿಂದ ಕಲಾವಿದರುಗಳನ್ನು,
ರಾಜಕಾರಣಿಗಳನ್ನು ಮತ್ತು ಭಾಷಣಕಾರರುಗಳನ್ನು ಕರೆತಂದು, ಅವರುಗಳಿಂದ ಪ್ರದರ್ಷಿತ
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆನಂದಿಸಿ, ರಾಜವೈಭೋಗವನ್ನು ಮೀರುವ ಭೋಜನಗಳನ್ನು
ಮಾಡುವುದು ಗೃಹವೇದನ ನಿವಾರಕ ಸಮಾರಂಭವಲ್ಲವೇ? ಇನ್ನು ಮುಂದಿನ
ವಿಶ್ವಕನ್ನಡಿಗರಸಮ್ಮೇಳವನ್ನು ಕರ್ನಾಟಕದಲ್ಲೇ ಮಾಡುವುದು ಉಚಿತವಲ್ಲವೇ? ಪ್ರಪಂಚದ
ಎಲ್ಲಾ ವಿದೇಶೀಕನ್ನಡಿಗರು ಸೇರಿ ಕನ್ನಡನಾಡಿನಲ್ಲಿ ಕನ್ನಡದ ಅಭಿವೃದ್ದಿಮಾಡುವ
ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಸಮಂಜಸವಲ್ಲವೇ?
ರಾಜಾರಾಮ್ ಕಾವಳೆ.
ಹ್ಯಾಂಪ್ ಶಯರ್,
ಯುನೈಟೆಡ್ ಕಿಂಗ್ ಡಮ್.